Sunday, June 21, 2015

ಕೆರೆ ತೊಣ್ಣೂರು ಪ್ರವಾಸ (Thonnur Lake travelogue)

ಕೆರೆ ತೊಣ್ಣೂರು ಪ್ರವಾಸ


ಕಲ್ಲಹಳ್ಳಿಯ ಭೂವರಾಹ ಸ್ವಾಮಿಯ ದರ್ಶನ ಪಡೆದು ನಮ್ಮ ಪಯಣ ಕೆರೆತೊಣ್ಣೂರಿನತ್ತ ಸಾಗಿತು. ತೊಣ್ಣೂರಿನಲ್ಲಿ ಮೊದಲು ಕೆರೆಯ ಬಳಿಗೆ ಹೋದೆವು. ಅಲ್ಲಿ ಜನಗಳ ದಂಡೇ ನೆರೆದಿತ್ತು ಹಿಂದೂ ಮುಸ್ಲಿಂ ಭೇದವಿಲ್ಲದೆ. ಬಹು ವಿಶಾಲವಾದ ಕೆರೆ. ಕೆರೆ ಎನ್ನುವುದಕ್ಕಿಂತಲೂ ಸಮುದ್ರ ಎನ್ನುವುದೇ ಲೇಸು. ಅದಕ್ಕೆಂದೇ ಇರಬೇಕು ಅದನ್ನು ಯಾದವ ಸಮುದ್ರ ಎನ್ನುತ್ತಾರೆ. ಇತಿಹಾಸದಲ್ಲಿ ಅದು ಎಂದೂ ಬತ್ತಿದ್ದಿಲ್ಲವಂತೆ. ಯಾವಾಗಲೂ ತುಂಬಿ ತುಳುಕುತ್ತಿರುವುದಂತೆ. ಈಚೆಗೆ ಕೆ.ಆರ್.ಎಸ್ ನ ನೀರಿನ ಸಂಪರ್ಕವನ್ನೂ ಕಲ್ಪಿಸಿದ್ದಾರೆ. ಅಂದ ಮೇಲೆ ಕೇಳಬೇಕೆ ಅದರ ಸೊಭಗನ್ನು. ನಮ್ಮ ಜನರ ಮನೋ ವರ್ತನೆ ಕೇಳಬೇಕೆ? ಅಲ್ಲೇ ಏನೆಲ್ಲ ತಿಂದು ಎಲ್ಲವನ್ನೂ ಅಲ್ಲೇ ಬಿಸಾಕಿ ಏನೊಂದೂ ಯೋಚನೆ ಇಲ್ಲದೇ ಅಲ್ಲಿನ ಪರಿಸರ ಹಾಳುಮಾಡುತ್ತಾ ತಮಗೆ ಸಂಬಂಧವಿಲ್ಲದಂತೆ ಅಡ್ಡಾಡುತ್ತಿರುತ್ತಾರೆ. ಅದರ ಪಾವಿತ್ರತೆಯಂತೂ ದೂರವೇ ಉಳಿಯಿತು. ಅಲ್ಲಿ ಇದರ ಬಗ್ಗೆ ಕಾಳಜಿ ವಹಿಸಿ ಹೇಳುವವರು, ಕೇಳುವವರು ಯಾರೂ ಇಲ್ಲ. ಈ ಸ್ಥಿತಿ ಯಾರನಾದರೂ ನೊಂದುಕೊಳ್ಳುವಂತೆ ಮಾಡುತ್ತದೆ. ಸ್ಥಳೀಯ ಪಂಚಾಯಿತಿ ಆಡಳಿತವಾಗಲೀ, ಪ್ರವಾಸೋದ್ಯಮ ಇಲಾಖೆಯಾಗಲೀ ಇದರತ್ತ ಸ್ವಲ್ಪ ಗಮನ ವಹಿಸಿ ಕ್ರಮ ಕೈಗೊಂಡಿದ್ದೇ ಆದರೆ ಇಲ್ಲೇ ಸ್ವರ್ಗ ಸೌಂದರ್ಯವನ್ನು ಸವಿಯಬಹುದಾಗಿದೆ. ಆ ದಿನಗಳಿಗಾಗಿ ಕನಸು ಕಾಣುವುದೇ ನಮ್ಮ ಜಾಯಮಾನವಲ್ಲವೇ?

ನಮ್ಮ ಈ ಕರ್ಣಾಟಕ ಶಂಕರ, ರಾಮಾನುಜ, ಮಧ್ವ, ಬಸವಣ್ಣ, ಜೈನ ತೀರ್ಥಂಕರರು, ಗುರುನಾನಕ್ ಮುದಲಾದ ಎಲ್ಲ ಮತ ಧರ್ಮ ಸುಧಾರಕರಿಗೂ ತವರುಮನೆಯಲ್ಲವೇ. ಭಗವದ್ರಾಮಾನುಜರು ತಮಿಳುನಾಡಿನಲ್ಲಿ ಅಲ್ಲಿನ ರಾಜ ಕ್ರಿಮಿಕಂಠ-ಚೊಳ ನ ಉಪಟಳ ತಾಳಲಾರದೆ ಕರ್ಣಾಟಕಕ್ಕೆ ಬಂದು ಸುಮಾರು ೧೨ ವರ್ಷಗಳಷ್ಟು ದೀರ್ಘಕಾಲ ಮೇಲುಕೋಟೆ, ತೊಣ್ಣೂರು, ಸಾಲಗ್ರಾಮ ಮುಂತಾದೆಡೆ ತಮ್ಮ ಕರ್ಮಭೂಮಿಯನಾಗಿಸಿಕೊಂಡು ಶಿಷ್ಯರೊಡನೆ ನೆಲೆಸಿ ಧರ್ಮಪ್ರಚಾರದಲ್ಲಿ ತೊಡಗಿ ಸಮಾಜ ಸುಧಾರಣೆಯಲ್ಲಿ ನಿರತರಾಗಿದ್ದರು. ತೊಣ್ಣೂರಿನ ಈ ಕೆರೆ ಮತ್ತು ದೇವಸ್ಥಾನಗಳು ಅವರಿಗೆ ಅತ್ಯಂತ ಪ್ರಿಯವಾಗಿದ್ದವಂತೆ. ಕೆರೆಗೆ ಹೊಂದಿಕೊಂಡಿರುವ ವಿಶಾಲ ಪಂಟಪದಲ್ಲೇ ಜೈನ ಧರ್ಮೀಯನಾದ ರಾಜಾ ಬಿಟ್ಟಿದೇವನು ಶ್ರೀವೈಷ್ಣವ ದೀಕ್ಷೆಯನ್ನು ಪಡೆದು ವಿಷ್ಣುವರ್ಧನನಾದುದಲ್ಲದೇ, ಆದಿಶೇಷಾವತಾರಿಗಳಾದ ರಾಮಾನುಜರು ಸಾವಿರಾರು ಜೈನ ಪಂಡಿತರೊಂದಿಗೆ ಏಕಕಾಲದಾಲ್ಲಿಯೇ ತತ್ವವಾದ ಮಾಡುತ್ತಾ ವಿಜಯಿಗಳಾಗಿ ಅವರೆಲ್ಲರಿಗೂ ಶ್ರೀವೈಷ್ಣವ ದೀಕ್ಷೆ ಕೊಟ್ಟರೆಂಬ ಐತಿಹ್ಯವಿದೆ. ಅದರ ಕುರುಹಾಗಿ ಅಲ್ಲಿನ “ಯೋಗಾನರಸಿಂಹ” ದೇವಾಲಯದಲ್ಲಿ ಗುಹಾಮಂಟಪದಲ್ಲಿ ಯೋಗಸ್ಥರಾಗಿರುವ ರಾಮಾನುಜರ ಭವ್ಯ ಮೂರ್ತಿ ಕಂಗೊಳಿಸುತ್ತಿದ್ದು, ಆದಿಶೇಷ ಸರ್ಪವು ಅವರನ್ನು ಬಳಸಿ ಹೆಡೆಎತ್ತಿರುವ ದೃಶ್ಯ ’ಮೈಜುಮ್’ ಎನ್ನಿಸುತ್ತದೆ.

ಯೋಗಾನರಸಿಂಹ ದೇವಸ್ಥಾನವನ್ನು ಕೃತಯುಗದಲ್ಲಿ ಪ್ರಹ್ಲಾದನು ಕಟ್ಟಿಸಿದ್ದನೆಂದು ಹೇಳುತ್ತಾರೆ. ಅಲ್ಲಿನ ಅರ್ಚಕರು ನರಸ್ಂಹ ವಿಗ್ರಹದ ಬಳಿ ಇರುವ ದಂಡವನ್ನು ನಮಗೆ ತೋರಿಸುತ್ತಾ ಸ್ಪರ್ಶಿಸಿದರು. ಭಗವದ್ದರ್ಶನ ಪೂಜಾದಿ ಕೈಂಕರ್ಯಗಳು ಬಹಳ ಸೊಗಸಾಗಿ ಆಯಿತು.





 ಅಲ್ಲಿಂದ ನಂಬಿನಾರಾಯಣನ ದೇವಳಕ್ಕೆ ಬಂದೆವು. ಅನೇಕ ಕಂಬಗಳಿಂದ ಕೂಡಿ ವಿಶಾಲವದ ಆವರಣ, ವಿಶಾಲವಾದ ಪ್ರಾಂಗಣ, ಶುಕನಾಸಿಗಳಿಂದ ಕಂಗೊಳಿಸುವ ದೇವಸ್ಥಾನ ಬಹಳವೇ ಆಕರ್ಷಕವಾಗಿದೆ. ಶ್ರೀ ಭೂ ಸಮೇತನಾದ ಆ ನಾರಾಯಣನ ಚೆಲುವನ್ನು ಬಣ್ಣಿಸಲು ಪದಗಳಿಲ್ಲ. ಅವನನ್ನು ನಂಬಿ ಕೆಟ್ಟವರಿಲ್ಲ. ಹಾಗಾಗಿ ಅವನು “ನಂಬಿನಾರಾಯಣ”.  ಪೂಜಾದಿಗಳನ್ನು ಮುಗಿಸಿಕೊಂಡು ಪ್ರಸಾದವಾಗಿ ದೊರೆತ ಸಕ್ಕರ್ಪೊಂಗಲ್ಲನ್ನು ಸವಿಯುತ್ತಾ ಗರುಡಗಂಬ ಪುಷ್ಕರಣಿ (ಸಣ್ಣದು, ಜನ ಸಂಪೂರ್ಣವಾಗಿ ಹಾಳುಮಾಡಿದ್ದಾರೆ.) ಪ್ರದಕ್ಷಿಣೆ ಮಾಡಿ ಎದುರಿನಲ್ಲೇ ಇರುವ ಮತ್ತೊಂದು “ಗೋಪಾಲಸ್ವಾಮಿ” ದೇವಸ್ಥಾನಕ್ಕೆ ನಡೆದೆವು.


ಗೋಪಾಲಸ್ವಮಿಯ ದೇವಸ್ಥಾನದ ಮುಂದಾವರಣವು ಗಿಡಮರಗಳಿಂದ ಹಚ್ಚ ಹಸಿರಾಗಿದೆ.ವಿಶಾಲವಾದ ಆವರಣದ ಒಂದು ಭಾಗದಲ್ಲಿ ತುಲಾಭಾರ ಮಂಟಪವಿದೆ.ದೇವಾಲಯದ ಅರ್ಚಾಮೂರ್ತಿ ಭವ್ಯವಾಗಿದೆ.  ಇದೂ ಸಹ ಅತ್ಯಂತ ಪುರಾತನವಾಗಿದ್ದು ಪಾಂಡವ ಧರ್ಮರಾಜ ಪತ್ತೆ ಮಾಡಿದನು ಎಂದು ಹೇಳುತ್ತಾರೆ. ಇಲ್ಲಿನ ಅರ್ಚಾಮೂರ್ತಿ ಶ್ರೀ ಕೃಷ್ಣ ಪಾರ್ಥಸಾರತಿಯಾಗಿ ಕರೆಯಲ್ಪಡುತ್ತಾನೆ. ಇಲ್ಲಿ ಶ್ರೀಕೃಷ್ಣ ವಿಶ್ವರೂಪದರ್ಶನದಲ್ಲಿದ್ದಾನೆ ಎಂದೂ ಹೇಳುತ್ತಾರೆ. ೮ ಅಡಿ ಎತ್ತರ ಮತ್ತು ೫ ಅಡಿ ಅಗವುಳ್ಳ ಈ ಸಾಲಿಗ್ರಾಮ ಮೂರ್ತಿ ಅಕ್ಕ ಪಕ್ಕದಲ್ಲಿ ಶ್ರೀ – ಭೂ ದೇವಿಯರೊಡನೆ ಮೋಹನರೂಪದಲ್ಲಿ ಕಂಗೊಳಿಸುತ್ತಿದ್ದು ಚಿತಾಪಹಾರಿಯಾಗಿದ್ದಾನೆ.




ಪಾರ್ಥಸಾರಥಿಯ ಮೂಲ ವಿಗ್ರಹದ ಮುಂದೆಯೇ ಶ್ರೀ ಕೃಷ್ಣನು ತ್ರಿಭಂಗಿ ರೂಪದಲ್ಲಿ ಕಣ್ಮನ ಸೆಳೆಯುತ್ತಾನೆ. ದೇವಸ್ಥಾನದ ಶೈಲಿ ಚೋಳರಕಾಲದ್ದು ಎನ್ನಲಾಗಿದೆ. ಒಟ್ಟಾರೆ ಸುಂದರ ಶಾಂತ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯದೊಂದಿಗೆ ಪವಿತ್ರತೆ ತುಂಬಿಕೊಂಡು ಹೊರಬಂದು ಗತ ಕಾಲದ ಚರಿತ್ರೆಯ ಹಿಂದೆ ಸುತ್ತಾಡುತ್ತಾ ಇಕ್ಕೆಡೆಗಳಲ್ಲಿಯೂ ಹಸಿರಿನಿಂದ ತುಂಬಿ ಸಂಜೆಯ ತಂಗಾಳಿಯನ್ನು ಅನುಭವಿಸುತ್ತಾ ಬೆಂಗಳೂರಿನ ಕಡೆಗೆ ಪ್ರಯಾಣಸಲು ಮುಂದಾದೆವು. ಗೋಪಾಲಸ್ವಾಮಿ ಮತ್ತು ಯೋಗಾನರಸಿಂಹ ದೇವಾಲಯಗಳಿಗೆ ಒಬ್ಬರೇ ಅರ್ಚಕರಿದ್ದು ಅವರು ಸರದಿಯಮೇಲೆ ಎರಡು ದೇವಸ್ಥಾನಗಳಿಗೆ ಅಡ್ಡಾಡುತ್ತಾ ಪೂಜಾದಿ ಸೇವೆಗಳನ್ನು ಮಾಡುವುದನ್ನು ನೋಡಿದಾಗ ಒಂದು ಕ್ಷಣ ’ಅಯ್ಯೋ ಭಗವಂತಾ ಇದೆಂತಹ ಕಾಲ ಬಂದಿತಪ್ಪಾ” ಎಂದು ನೊಂದುಕೊಳ್ಳುವಂತಾಯಿತು. ಮುಜರಾಯಿ ಇಲಾಖೆಗೆ ಸೇರಿದ ಈ ದೇವಸ್ಥಾನಗಳಿಗೆ ಇಲಾಖೆ ಇತ್ತ ಗಮನವಹಿಸಿ ಈ ಕೊರತೆಯನ್ನು ಬೇಗನೆ ನೀಗಿಸಲು ಕ್ರಮ ಕೈಗೊಳ್ಳುವಂತಾಗಲಿ ಎಂದು ಹಾರೈಸೋಣವೆ.

ಬೆಂಗಳೂರು ಪಯಣದ ಮಾರ್ಗದ ಇಕ್ಕೆಡೆಗಳಲ್ಲಿ ಕಬ್ಬಿನ ಗದ್ದೆಗಳು ಮಧ್ಯೆ ಮಧ್ಯೆ ಕಬ್ಬಿನ ಗಾಣಗಳು, ಇದನ್ನು ನೋಡುತ್ತಾ ನಮ್ಮ ಬಾಯೂರಿ ನಾಲಿಗೆ ಚಪ್ಪರಿಸುವಂತಾಯಿತು. ಕಬ್ಬಿಣ ಗಾಣದ ಒಂದೆಡೆ ವಾಹನ ನಿಲ್ಲಿಸಿ ಒಳಹೊಕ್ಕೆವು. ಗಾಣ ಆಡುತ್ತಿರಲಿಲ್ಲ. ನಿಂತಿತ್ತು. ಆದರೂ ನಮ್ಮನ್ನು ಕಂಡ ಗಾಣ ಅರೆಯುವವರು ನಮ್ಮನ್ನು ಆದರದಿಂದ ಬರಮಾಡಿಕೊಂಡು ಸಾಕೆನಿಸುವಷ್ಟು ಕಬ್ಬಿನ ಹಾಲನ್ನು ಅರೆದು ಕೊಟ್ಟರು. 
ಲೇಖಕಿ ರಜನಿ
ಸವಿಯಲು ಬಿಸಿ ಬಿಸಿ ಬೆಲ್ಲ ಕೊಟ್ಟರು. ಅಷ್ಟೇ ಅಲ್ಲ ನಮ್ಮ ನೀರಿನ ಬಾಟಲುಗಳಿಗೂ ಕಬ್ಬಿನ ಹಾಲು ತುಂಬಿ ಕೊಟ್ಟರು. ಎಲ್ಲವನ್ನೂ ಹಣದಿಂದಲೇ ಅಳೆಯುವ ಈ ದಿನಗಳಲ್ಲಿ ಈತರದ ನಡಾವಳಿ ಈ ಆದರ ಸತ್ಕಾರಗಳಲ್ಲವೇ ನಮ್ಮ ಕನ್ನಡ ನಾಡಿನ ಸಂಸ್ಕೃತಿಯನ್ನು ಸಾರುವುದು. ನಾವೂ ಸಹ ಸ್ವಲ್ಪ ಬೆಲ್ಲದ ಅಚ್ಚುಗಳನ್ನು ಕೊಂಡು ಅವರಿಗೆ ಧನ್ಯವಾದ ಹೇಳಿ ಮುಂದೆ ಸಾಗಿದೆವು. ಬೆಳಕು ಕರಗಿ ಕತ್ತಲಾಗತೊಡಗಿತ್ತು. ಮತ್ತೆ ನಗರ ಸೇರಿದ ನಾವು ಇನ್ನೂ ಆ ದಿನವನ್ನು ಮೆಲಕು ಹಾಕುತ್ತಿದ್ದೇವೆ.

ಲೇಖಕರು : ಎನ್.ಎಸ್.ರಜನಿ
ಫೋಟೋಗ್ರಾಫಿ : ವಸಿಷ್ಠ
ಕೀಯಿಂಗ್ : ಜಗನ್ನಾಥ

Thursday, June 18, 2015

ಕಲ್ಲಹಳ್ಳಿ ಭೂವರಾಹ ಸ್ವಾಮಿ ದೇವಾಲಯ (Kallahalli Bhoovaraaha Swami Temple)

ಕಲ್ಲಹಳ್ಳಿ ಭೂವರಾಹ ಸ್ವಾಮಿ ದೇವಾಲಯ



ಹೊಸಹೊಳಲಿನ ಐತಿಹಾಸಿಕ ದೇವಾಲಯದ ದರ್ಶನವಾದ ಬಳಿಕ ಸಮೀಪದಲ್ಲೇ ಇರುವ ಕಲ್ಲಹಳ್ಳಿಗೆ ನಮ್ಮ ಪಯಣ ಸಾಗಿತು, ಅಲ್ಲಿ ಈಚೆಗೆ ಬಹಳವಾಗಿ ಕೇಳಿಬರುತ್ತಿರುವ ಭೂವರಾಹ ಸ್ವಾಮಿಯ ದರ್ಶನ ಪಡೆಯುವ ಸಲುವಾಗಿ. ದೇವಾಲಯ ಇನ್ನೂ ಜೀರ್ಣೋದ್ಧಾರದ ಹಂತದಲ್ಲಿದೆ. ಕೆಲವು ವರ್ಷಗಳ ಹಿಂದೆ ದುಬಾಯಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉದ್ಯಮಿಯೊಬ್ಬರಿಗೆ ಕನಸಿನಲ್ಲಿ ಬಂದ ಈ ಮೂರ್ತಿ ನನಗೆ ಪೂಜಾದಿಗಳು ಇಲ್ಲದೆ ಪಾಳು ಬಿದ್ದಿರುವೆ ಎಂಬ ಕನಸು ಪದೇ ಪದೆ ಬೀಳುತ್ತಿತ್ತಂತೆ. ಕುತೂಹಲದಿಂದ ಅವರು ಬಂದು ಈ ಸ್ಥಳವನ್ನು ಹುಡುಕಿ ನೋಡಲಾಗಿ ಆಆಳೆತ್ತರದ ಈ ಭವ್ಯವಾದ ಸಾಲಗ್ರಾಮ ಶಿಲೆಯ ಮೂರ್ತಿ ಕಾಣಿಸಿತಂತೆ. ಆಗ ಅವರೇ ಮುಂದಾಗಿ ಎಲ್ಲ ಆರ್ಥಿಕ ವ್ಯವಸ್ಥೆಯನ್ನು ವಹಿಸಿಕೊಂಡು ಮೈಸೂರಿನ ಪರಕಾಲಮಠದ ಪೂಜ್ಯ ಸ್ಮಾಮೀಜಯವರ ಆಶೀರ್ವಾದದೊಂದಿಗೆ ಜೀರ್ಣೋದ್ಧರ ಕಾರ್ಯ ಪ್ರಾರಂಭಿಸಿದರಂತೆ. ಹಾಗಾಗಿ ಈಗ ಪರಕಾಲಮಠದ ಶ್ರೀ ಶ್ರೀ ಶ್ರೀ ವಾಗೀಶಬ್ರಹ್ಮತಂತ್ರ ಮಹಾಸ್ವಾಮಿಗಳವರ ನೇತೃತ್ವದಲ್ಲೇ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗಿದೆ. ವರಾಹಸ್ವಾಮಿಯು ತಮ್ಮ ಎಡಬಗಲಲ್ಲಿ ಭೂದೇವೀ ಮಾತೆಯನ್ನು ಹಿಡಿದು ಕುಳಿತಿರುವ ಭಂಗಿಯಂತೂ ಕಣ್ಮನಗಳಿಗೆ ವರ್ಣಿಸಲಾಧ್ಯ. ಅದನ್ನು ದರ್ಶಿಸಿಯೇ ಅನುಭವಿಸಬೇಕು. ಮೂರ್ತಿ ಹೊಯ್ಸಳರ ಕಾಲದ್ದೆಂಬ ಮಾಹಿತಿ ಇದೆ.

ದೇವಾಲಯ ಜೀರ್ಣೋದ್ಧಾರದ ಹಂತದಲ್ಲಿದ್ದರೂ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಇಲ್ಲಿಗೆ ದೂರ ದೂರದಿಂದ ಬರುತ್ತಾರೆ.  ಶನಿವಾರ ಭಾನುವಾರದಲ್ಲಂತೂ ಇನ್ನೂ ವಿಶೇಷ. 



ಲ್ಲಿನ ಮತ್ತೊಂದು ವಿಶೆಷವೆಂದರೆ.ಹೊಸದಾಗಿ ಮನೆ ಕಟ್ಟುವವರು ಜಾತಿ ಮತಗಳ ಭೇದವಿಲ್ಲದೆ ಇಲ್ಲಿಗೆ ಬಂದು ಇಟ್ಟಿಗೆಗಳನ್ನು ಪೂಜೆ ಮಾಡಿಸಿ ಕೊಂಡೊಯ್ಯುತ್ತಾರೆ. ಹಾಗೆ ಮಾಡಿ ಆ ಇಟ್ಟಿಗೆಗಳಿಂದ ಮನೆ ಮೊದಲಾದುವುಗಳ ನಿರ್ಮಾಣ ಪ್ರಾರಂಭಿಸಿದರೆ ಎಲ್ಲವೂ ನಿರ್ವಿಘ್ನವಾಗಿ ಸುಸೂತ್ರವಾಗಿ ಪೂರ್ಣಗೊಂಡು ಕುಟುಂಬಕ್ಕೆ ಸುಖ ಶಾಂತಿ ದೊರೆಯುವುದೆಂಬ ನಂಬಿಕೆ ಎಲ್ಲರಲ್ಲೂ ದಟ್ಟವಾಗಿರುವ ಹಾಗೆ ಕಂಡುಬರುತ್ತಿದೆ.





ದೇವಾಲಯದ ಬದಿಯಲ್ಲೇ ಕಾವೇರಿ ವೈಯ್ಯಾರದಿಂದ ನಡೆದು ಸಾಗುತ್ತಿದ್ದಾಳೆ. ಸುತ್ತ ಮುತ್ತ ಹಸಿರು ಮನಸ್ಸಿಗೆ ಮುದ ತುಂಬಿಕೊಡುತ್ತದೆ. ದೇವಾಲಯದ ಮುಂದೆ ಎರಡು ಬದಿಗಳಲ್ಲಿ ಅಲ್ಲಿನ ರೈತರು ತಾವು ಬೆಳೆದ ಸೊಪ್ಪು ತರಕಾರಿಗಳನ್ನು ಆಗ ತಾನೇ ಕಿತ್ತು ತಂದು ಮಾರುತ್ತಿರುತ್ತಾರೆ. ಅಲ್ಲಿಗೆ ಬಂದ ಯಾರೊಬ್ಬರೂ ಅಪರೂಪಕ್ಕೆ ಸುಲಭ ಬೆಲೆಗೆ ಸಿಗುವ ಆ ಶುದ್ಧ ತರಕಾರಿಗಳನ್ನು ಕೊಳ್ಳದೆ ಹೊರಡುವುದಿಲ್ಲ. ನಾವೂ ಅದೇ ಕೆಲಸ್ ಮಾಡಿ ಅಲ್ಲಿಂದ ಮುಂದೆ ಕೆರೆ ತೊಣ್ಣುರಿನ ಕಡೆ ಪಯಣ ಬೇಳೆಸಿದೆವು.


ಲೇಖಕರು : ಎನ್.ಎಸ್.ರಜನಿ 
ಫೋಟೋಗ್ರಾಫಿ : ವಸಿಷ್ಠ
ಕೀಯಿಂಗ್ : ಜಗನ್ನಾಥ

Sunday, June 7, 2015

ಹೊಸಹೊಳಲು ಪ್ರವಾಸ - Hosaholalu Travelogue

ಹೊಸಹೊಳಲು ಪ್ರವಾಸ

ಸಂಜೆ ಆಫೀಸಿನಿಂದ ಮನೆಗ ಮಗ ಬರುತ್ತಿದ್ದಂತೆ ಖುಷಿಯಾಗಿ ಹೇಳಿದ  ಅಮ್ಮಾ ನಾಳಿದ್ದು ಭಾನುವಾರ ಒಂದು ಸೊಗಸಿನ ಪ್ರಯಾಣಕ್ಕೆ ತಯಾರಿ ಮಾಡು ಎಂದು.
ಮನೆಯಲ್ಲೇ ಇದ್ದು ಬೋರು ಬೋರೋ ಎಂದು ಆಗಾಗ ಹಾಡುವ ನನಗೆ ಅವನ ಮಾತು ಕೇಳುತ್ತಿದ್ದ ಹಾಗೇ ಕಿವಿ ಚುರುಕಾಯ್ತು.ಎಲ್ಲಿಗೋ ಈ ಬಾರಿ ಎಂದೆ ಉತ್ಸಾಹ ತಡೆಯಲಾರದೆ. ಅದನ್ನ ಆಮೇಲೆ ಹೇಳ್ತೀನಿ, ಸಧ್ಯಕ್ಕೆ ಈಗ ಊಟ ಬದಿಸು ಎಂದು ಕೈಕಾಲು ತೊಳೆಯಲು ಹೋದ. ಸೊಸೆಯನ್ನು ಕರೆದು ತಕ್ಷಣ ಒದರಿದೆ. ಈ ಬಾರಿ ಒಂದು ಪುಟ್ಟ ಪ್ರಯಾಣಕ್ಕೆ ಸಿದ್ಧಮಾಡಿಕೊ. ಮಗುವಿನ ಅಗತ್ಯತೆಗಳ ಚೀಲ ಸಿದ್ದಪಡಿಸಿಕೋ ಎಂದೆ. ಅವಳು ನನ್ನಷ್ಟೇ ಉತ್ಸಾಹಿ, ಹೊರಗಡೆ ತಿರುಗಾಡಿ ಬರುವುದೆಂದರೆ. ಅವಳೂ ಖುಷಿಯಾದಳು.

ಭಾನುವಾರ ಬೆಳಗಿನ ೫:೩೦ ಕ್ಕೆ ಎಲ್ಲರೂ ಹೊರಡ್ಲು ಸಜ್ಜಾದೆವು. ತವೇರಾ ಗಾಡಿ ಆಗಲೇ ಬಂದು ನಿಂತಿತ್ತು. ಎಲ್ಲರೂ ಕುಳಿತ ಹಾಗೇ, ಮಗ ಹೇಳಿದ ಮೈಸೂರು ರೋಡಿಗೆ ಚಲಿಸಿ ಎಂದು. ಈಗಲಾದರೂ ಸಸ್ಪೆನ್ಸ್ ಮುರಿಯೋ ಎಂದೆ  ಆಗ ಬಾಯ್ಬಿಟ್ಟ. ಹೊಸಹೊಳಲು, ಕಲ್ಲಳ್ಳಿ ಭೂವರಾಹ, ಕೆರೆತೊಣ್ಣೂರು, ಅಲ್ಲಿ ಕೆರೆ, ದೇವಸ್ಥಾನಗಳು ನಂತರ ಹಿಂತಿರುಗೋದು ಎಂದ.

ಮೊದಲಿಗೆ ನಾವು ಕೆ ಆರ್ ಪೇಟೆಗೆ ಹೊರೆಟ್ವಿ. ಏಕೆಂದರೆ ನಮಗೆ ಹೊಸಹೊಳಲು ನೋಡುವುದಿತ್ತು.  ಹೊಸಹೊಳಲು ಕೆ ಆರ್ ಪೇಟೆಗೆ ಮೂರು ಮೈಲಿ ದೂರದಲ್ಲಿದೆ.
ನಮಗೆ ಅಲ್ಲಿನ ಮಾಹಿತಿ ಬೋರ್ಡಿನಲ್ಲಿ ಸಿಕ್ಕ ವಿಚಾರವೆಂದರೆ, ಹೊಸಹೊಳಲು ಗಂಗ ಚೋಳರ ರಾಜ್ಯ ಸೀಮೆಯಲ್ಲಿದ್ದು, ನಂತರ ಹೊಯ್ಸಳರ ಕಾಲದಲ್ಲಿ ಒಂದು ಅಗ್ರಹಾರವಾಗಿತ್ತು. ಈ ಚಿಕ್ಕ ಊರು ೧೩ ನೇ ಶತಮಾನದಲ್ಲಿ ನಿರ್ಮಿತಿಯಾದ ಲಕ್ಷ್ಮೀನಾರಾಯಣ ದೇವಾಲಯದಿಂದ ಬಹಳ ಪ್ರಸಿದ್ಧಿ ಪಡೆದಿದೆ. ವಿಜಯನಗರದರಸರ ಕಾಲದಲ್ಲಿ ಈ ಊರಿನ ಸುತ್ತ ಒಂದು ಕೋಟೆ ನಿರ್ಮಾಣವಾಗಿತ್ತು ಎನ್ನಲಾಗಿದೆ.


ಈ ದೇವಾಲಯವನ್ನು ನೋಡಿದ ಕೂಡಲೇ, ಇದು ಹೊಯ್ಸಳ ಶೈಲಿಯ ವಾಸ್ತು ನಿರ್ಮಾಣ ಎಂಬುದು ಯಾರಿಗಾದರೂ ಅನ್ನಿಸುತ್ತದೆ.




ಅಮೋಘವಾದ, ಅತ್ಯಂತ ಸುಂದರವಾದ ನಕ್ಷತ್ರಾಕಾರದ ತಳಕಟ್ಟಡದ ಮೇಲೆ ಭವ್ಯವಾದ ದೇವಾಲಯ ನಿರ್ಮಿತಿಗೊಂಡಿದೆ. ತ್ರಿಕೂಟಾಚಲವಾದ ಈ ದೇವಾಲಯದಲ್ಲಿ ಮೂರು ಗರ್ಭಗುಡಿಗಳಿವೆ. ಎತ್ತರವಾದ ಜಗಲಿಯ ಮೇಲೆ ಪೂರ್ವಕ್ಕೆ ಮುಖದ್ವಾರವಿದೆ. ಪಶ್ಚಿಮದ ಗರ್ಭಗೃಹಕ್ಕೆ ಮಾತ್ರ ಶುಕನಾಸಿ ಮತ್ತು ವಿಮಾನವಿದೆ. 



ಮಧ್ಯದಲ್ಲಿ ಒಂದು ಸುಂದರವಾದ ಕೆತ್ತನೆಗಳಿಂದ ತುಂಬಿದ ಕಂಬಗಳಿಂದ ಕೂಡಿ ಗುಂಡನೆಯ ನೃತ್ಯಮಂಟಪದೊಂದಿಗೆ ನವರಂಗಮಂಟಪವಿದೆ. ನವರಂಗಕ್ಕೆ ಪೂರ್ವದಲ್ಲಿ ಭದ್ರಮಂಟಪವಿದೆ. ಒಂದೊಂದು ಕಂಬಗಳೂ ವಿಶಿಷ್ಟವಾದ ಕೆತ್ತನೆಗಳಿಂದ ತುಂಬಿವೆ. ಕಂಬಗಳ ಮೇಲ್ಛಾವಣಿಗಳಲ್ಲಿ ಆನೆ, ಕುದುರೆ, ಕಾಲಾಳು, ಬಳ್ಳಿ, ಪೌರಾಣಿಕ ಕಥಾನಕಗಳು ಇವುಗಳ ಶಿಲ್ಪಗಳಿಂದ ದೇವಳದ ಹೊರಮೈ ಕೋಷ್ಠ್ಹಕಗಳು ತುಂಬಿ ಮನ ಸೂರೆಗೊಳ್ಳುತ್ತವೆ. ಇವೆಲ್ಲವೂ ಹೊಯ್ಸಳ ಶೈಲಿಯನ್ನು ಘೋಷಿಸುತ್ತವೆ. ಒಳಗಡೆ ಭುವನೇಶ್ವರಿಗಳೂ ಸಹ ಮಿಥುನ ಶಿಲ್ಪಗಳಿಂದ ಹಾಗೂ ಇತರೆ ಅನೇಕ ಸುಂದರ ವಿನ್ಯಾಸಗಳ ಕೆತ್ತನೆಗಳಿಂದ ತುಂಬಿ ಅತ್ಯಂತ ರಮಣೀಯವಾಗಿವೆ. ದೇವಸ್ಥಾನದ ಶಿಲ್ಪ ವೈಭವ ಯಾವ ಬೇಲೂರು ಅಥವಾ ಹಳೇಬೀಡುಗಳ ಶಿಲ್ಪ ವೈಭವಕ್ಕೆ ಕಡಿಮೆ ಏನೂ ಇಲ್ಲ ಎಂದು ನಮಗೆ ಅನಿಸದೇ ಇರುವುದಿಲ್ಲ. ಸುಂದರ ಆವರಣದಿಂದ ಕಂಗೊಳಿಸುತ್ತಿರುವ ಈ ದೇವಸ್ಥಾನದ ಕರ್ತೃ, ಕಾಲ ಇವುಗಳ ಸರಿಯಾದ ಮಾಹಿತಿ ಇಲ್ಲದಿರುವುದು ಖೇದದ ಸಂಗತಿಯೇ ಸರಿ.ದೇವಸ್ಥಾನದ ಅರ್ಚಕರ ಹೇಳಿಕೆಯ ಪ್ರಕಾರ ಕ್ರಿ.ಶ ೯೪೩  ೧೦೫೦ ರೊಳಗೆ ಈ ದೇವಾಲಯ ನಿರ್ಮಾಣವಾಗಿರಬೇಕು. 

ಮೊದಲನೆಯ ಗರ್ಭಗುಡಿಯಲ್ಲಿ ವೇಣುಗೊಪಾಲ ಮೂರ್ತಿ ಇದೆ. ಇದು ಸಾಲಿಗ್ರಾಮ ಶಿಲೆಯಲ್ಲಿ ಕಡೆಯಲ್ಪಟ್ಟು ಮನಮೋಹಕವಾಗಿದೆ. ಎಲ್ಲ್ಲಾಗರ್ಭಗುಡಿಯ ದ್ವಾರದ ಹೊರ ಮೇಲ್ಭಾಗದಲ್ಲಿ ಒಳಗಿನ ಮೂರ್ತಿಯನ್ನೇ ತದ್ರೂಪವಾಗಿ ಕೆತ್ತಲಾಗಿದೆ. ಆದರೆ ವೇಣುಗೋಪಾಲಸ್ವಾಮಿಯ ಗರ್ಭಗುಡಿಯ ಮೂರ್ತಿ ಹೊರ ದ್ವಾರದ ಮೂರ್ತಿಗಿಂತ ಭಿನ್ನವಾಗಿದೆ. ಅರ್ಚಕರ ಅಂಬೋಣ ಏನೆಂದರೆ ಈಗ್ಗೆ ಸುಮಾರು ೬೦ - ೭೦ ವರ್ಷಗಳ ಮೊದಲು ಮೂಲ ಗರ್ಭಗುಡಿಯ ಮೂರ್ತಿಯನ್ನು ಏನೋ ಕಾರಣದಿಂದ ಕೆ ಅರ್.ಎಸ್ ನದಿಯಲ್ಲಿ ಹಾಕಲಾಗಿ ನಂತರ ಈ ಮೂರ್ತಿಯನ್ನು ಇಲ್ಲಿ ತಂದು ಪ್ರತಿಷ್ಠಾಪಿಸಲಾಗಿದೆ,  ಹೊರ ದ್ವಾರದ ಮೂರ್ತಿಯ ಸುತ್ತಲೂ ತಳಿರು ತೋರಣದಂತೆ ಕಂಡುಬರುವ ಕೆತ್ತನೆ ಅತ್ಯಂತ ಸೂಕ್ಷ್ಮ ಕೆತ್ತನೆಗಳಿಂದ ಸಿರಿನಿಧಿಯಂತೆ ಕಂಗೊಳಿಸುತ್ತದೆ. ಪಕ್ಕದಲ್ಲಿ ಗಣಪತಿಯು ಮಗುವಿನಂತೆ ಕುಳಿತಿರುವ ಭಂಗಿಯ ಶಿಲ್ಪವನ್ನು ನೋಡಬಹುದು.

ಮಧ್ಯಭಾಗದಲ್ಲಿ ಆಳೆತ್ತರದ ಸಾಲಿಗ್ರಾಮಶಿಲೆಯ ನಾರಾಯಣನ ದಿವ್ಯಮೂರ್ತಿ ಕಂಗೊಳಿಸುತ್ತಿದೆ. ಮುಂದಿನ ಕೈಗಳಲ್ಲೇ ಶಂಖ - ಚಕ್ರಧಾರಿಯಾಗಿದ್ದಾನೆ. ಹಿಂದಿನ ಎರಡು ಕೈಗಳಲ್ಲಿ ತಾವರೆ ಹೂವನ್ನು ಪಿಡಿದಿದ್ದಾನೆ. ನಸು ನಗುತ್ತಾ ನಿಂತಿರುವ ಆ ಸುಂದರಭಂಗಿ ಎಂಥಹವರನ್ನೂ ಸೆಳೆಯುತ್ತದೆ. ಸ್ವಾಮಿಗೆ ಪೂಜಾದಿಗಳನ್ನು ಅರ್ಚಕರು ಮಾಡಿದರು. 



ನಂತರ ಪಕ್ಕದಲ್ಲೇ ಲಕ್ಷ್ಮೀನರಸಿಂಹಸ್ವಾಮಿಯ ದಿವ್ಯವಾದ ಮೂರ್ತಿ. ಇಲ್ಲಿನ ವಿಶೇಷವೆಂದರೆ ಇಲ್ಲಿ ಪ್ರಹ್ಲಾದನೂ ಕೈಜೊಡಿಸಿ ನಿಂತಿರುವುದು. ಪ್ರಹ್ಲಾದನ ಈ ಭಂಗಿ ಇಲ್ಲಿ ಮತ್ತು ಆಂದ್ರಪ್ರದೇಶದ ಕದ್ರಿಯಲ್ಲಿರುವ ನರಸಿಂಹ ದೇವಸ್ಥಾನ ಬಿಟ್ಟರೆ ಮತ್ತೆಲ್ಲೂ ಕಾಣಸಿಗುವುದಿಲ್ಲ. ಇದೇ ಇಲ್ಲಿನ ವಿಶೇಷ. ಪ್ರತಿ ಮಂಗಳವಾರ ಮತ್ತು ಭಾನುವಾರ ಪ್ರಹ್ಲಾದ ನರಸಿಂಹರ ದರ್ಶನ ಬಹಳ ಪುಣ್ಯಪ್ರದ ಎಂಬುದು ಅರ್ಚಕರ ಅಂಬೋಣ.

ಎತ್ತರವಾದ ಪಾಣಿಪೀಠದಲ್ಲಿ ಲಕ್ಷ್ಮೀ ಸಮೇತನಾಗಿ ನರಸಿಂಹನು ಕುಳಿತಿರುವ ಹಿಂದೆ ಇರುವ ಪ್ರಭಾವಳಿಯಲ್ಲಿ (ಕಲ್ಲಿನ) ಅವತಾರಗಳ ಕೆತ್ತನೆ ಇದೆಯಂತೆ.



ಅಲ್ಲಿಂದ ಹೊರಗಿನ ಆವರಣಕ್ಕೆ ಬಂದೆವು. ಅಲ್ಲೇ ಸ್ವಾಮಿಯ ಎಡ ಬದಿಯಲ್ಲಿ ಸೌಮ್ಯನಾಯಕಿಯ ಸುಂದರ ಶಿಲಾಮೂರ್ತಿ ಇದೆ. ಅದು ಈಚಿನದು ಅಂದರೆ ಸುಮಾರು ೯೦೦ ವರ್ಷಗಳಷ್ಟು ಹಳೆಯದು ಎಂದು ಅರ್ಚಕರು ತಿಳಿಸಿದರು. ದೇವಸ್ಥಾನದ ಹೊರಗೋಡೆಗಳಲ್ಲಿ ಪೂರ್ಣ ರಾಮಯಣವನ್ನು ಚಿತ್ರದಲ್ಲಿ ಬಿಡಿಸಲಾಗಿದೆ. ಅಮ್ಮನವರ ಪೂಜೆಯನ್ನು ಮುಗಿಸಿಕೊಂಡು ಅಲ್ಲೇ ಇರುವ ಬಾವಿಯನ್ನು ಒಮ್ಮೆ ಪ್ರದಕ್ಷಿಣೆ ಹಾಕಿ ಸ್ವಲ್ಪ ಹೊತ್ತು ಅಲ್ಲೇ ಕುಳಿತಿದ್ದು, ಮತ್ತೊಮ್ಮೆ ದೇವಸ್ಥಾನದ ಸಾನಿಧ್ಯದ ರಸಾನುಭವವನ್ನು ಮನದೊಳಗೇ ತುಂಬಿಕೊಂಡು ಸವಿಯುತ್ತಾ ಮುಂದಿನ ಪಯಣಕ್ಕೆ ಹೊರಟೆವು.


ಲೇಖಕರು : ಎನ್.ಎಸ್.ರಜನಿ
ಫೋಟೋಗ್ರಾಫಿ : ವಸಿಷ್ಠ
ಕೀಯಿಂಗ್ : ಜಗನ್ನಾಥ