ಲೇಕಖಿ : ರಜನಿ.ಏನ್.ಎಸ್
ಫೋಟೋಗ್ರಫಿ : ವಸಿಷ್ಠ
ಕೊಲಾರಿನಲ್ಲಿ ಒಂದು ಸುತ್ತು
ರಾತ್ರಿಯ ಕತ್ತಲು ಕರಗುತ್ತಿತ್ತು. ಬೆಳ್ಳ ಬೆಳಕು ಮೂಡುತ್ತಲಿತ್ತು. ನಸುಕಿನ ಹಿತವಾದ ತಂಗಾಳಿ ಕಾರಿನಲ್ಲಿ ಕುಳಿತ ನಮ್ಮೆಲ್ಲರ ಮೈಮನವನ್ನು ಅರಳಿಸುತ್ತಿತ್ತು. ದಾರಿಯನ್ನು ಸೀಳುತ್ತ ನಮ್ಮ ವಾಹನ ಕೋಲಾರದ ಕಡೆ ಸಾಗುತ್ತಿತ್ತು.
ಕಳೆದ ಬಾರಿ ನಾವು ಕೋಲಾರಕ್ಕೆ ಹೋದಾಗ ಅನೇಕ ಸ್ಥಳಗಳನ್ನು ಸಮಯದ ಪರಿಧಿಯಲ್ಲಿ ನೋಡಲಾಗದೆ ಹಿಂತಿರುಗಿದ್ವಿ. ಈಗ ಆ ಎಲ್ಲ ಸ್ಥಳಗಳ ಸೌಂದರ್ಯವನ್ನು ಸಮಿಲು ಹೊರಟಿದ್ವಿ.
ಮೊದಲಿಗೆ ಕೋಲಾರದ ಸುಪ್ರಸಿದ್ಧ ಸ್ಥಳವಾದ ಅಂತರಗಂಗೆಗೆ ಹೊರಟ್ವಿ. ಮುಂಜಾನೆ ೮ ಘಂಟೆಗೆಲ್ಲಾ ನಾವು ಅಲ್ಲಿದ್ವಿ. ಅಂತರಗಂಗೆಯನ್ನು ದಕ್ಷಿಣದ ಕಾಶಿ ಎನ್ನುತ್ತಾರೆ. ಬೆಂಗಳೂರಿನಿಂದ ಸುಮಾರು ೬೫ ಕಿ.ಮೀದೂರದಲ್ಲಿದೆ.
ಸುಮಾರು ನೂರು ಮೆಟ್ಟಲುಗಳನ್ನು ಹತ್ತಬೇಕು. ಅಕ್ಕಪಕ್ಕಗಳಲ್ಲಿ ನೀಲಗಿರಿಯ ಅನೇಕ ಗಿಡಗಳನ್ನು ಬೆಳಸಿದ್ದಾರೆ. ಅದರೆ ನೀಲಗಿರಿಯ ವೃಕ್ಷಗಳನ್ನು ಅಷ್ಟೊಂದುಬೆಳಸಿರುವುದು ಸರಿಯಲ್ಲ ಎಂದು ನಮಗೆ ಅನಿಸಿತು. ಆ ಮರಗಳು ೧೦೦ ಮೈಲಿಗಳಿನಿಂದಲೂ ನೀರನ್ನು ಸೆಳೆದು ಕುಡಿಯುವಿದರಿಂದ ಸುತ್ತಲಿನ ಪ್ರದೇಶಗಳಲ್ಲಿ ನೀರಿನ ಜ್ವಲಂತ ಸಮಸ್ಯೆಯಾಗಬಹುದು. ಅಂತರಗಂಗೆ ಬೆಟ್ಟವನ್ನು ಹಿಂದೆ ಶತಶೃಂಗ ಪರ್ವತ ಎಂದು ಕರೆಯಲಾಗುತ್ತಿತ್ತು. ವಿಪರೀತ ಕೋತಿಗಳಿವೆ. ಆದರೆ ಯಾರಿಗೂ ತೊಂದರೆ ಕೊಡುವುದಿಲ್ಲ. ಏನಾದರೂ ತಿಂಡಿಯನ್ನು ನಿರೀಕ್ಷಿಸುತ್ತವೆ.
ಬೆಟ್ಟದ ಶಿಖರವು ಹಾವಿನ ಆಕಾರದಲ್ಲಿದೆ. ಬಸವನ ಬಾಯಿಂದ ಸಿಹಿಯಾದ ನೀರು ಒಸರುತ್ತದೆ. ಒಳಗೆ ಮೂರು ಗರ್ಭಗುಡಿಗಳಿವೆ. ಗಣಪ ಪಕ್ಕದಲ್ಲೇ ಸುಬ್ರಹ್ಮಣ್ಯರನ್ನು ಕೆತ್ತಿದ್ದಾರೆ. ಮಧ್ಯದಲ್ಲಿ ಕಾಶಿ ವಿಶ್ವನಾಥನ ಲಿಂಗವಿದೆ. ಅದರ ಪಕ್ಕದಲ್ಲಿಇನ್ನೊಂದು ಗರ್ಭಗುಡಿಯಲ್ಲಿ ವಿಶಾಲಾಕ್ಷಿ ನಿಂತು ದರ್ಶನ ನೀಡಿದ್ದಾಳೆ. ಹೊರಪಕ್ಕದಲ್ಲಿ ಸಾಲಾಗಿ ದೊಡ್ಡ ದೊಡ್ಡ ಲಿಂಗಗಳಿವೆ.
ನಾವು ದೇವರನ್ನು ದರ್ಶಿಸಿ ಪ್ರಸಾದ ಸ್ವೀಕರಿಸಿ ಸ್ವಲ್ಪ ಹೊತ್ತು ಕುಳಿತು ಆ ಸ್ಥಳದ್ ಸೌಂದರ್ಯವನ್ನು ಸವಿದು ಮುಂದೆ ಕೋಲಾರಮ್ಮನ ದೇವಸ್ಥಾನದತ್ತ ಸಾಗಿದ್ವಿ. ಕೋಲಾರಮ್ಮನ ದೇವಳವು ಬಹಳ ಪ್ರಾಚೀನವಾದ ದೇವಸ್ಥಾನ. ಸುಮಾರು ೧೮೦೦ ವರ್ಷಗಳ ಇತಿಹಾಸವಿರುವ ದೇವಳ. ರಾಜರಾಜ ಚೋಳನೆಂಬ ಚೋಳರಸ ಕಟ್ಟಿಸಿದ್ದನೆಂದು ಹೇಳುತ್ತಾರೆ. ಅದಕ್ಕೆ ಸಾಕ್ಷಿ ಎಂಬಂತೆ ದೇವರ ಗುಡಿಯ ಎಡ ಭಾಗದಲ್ಲಿ ಅವನ ಮೂರ್ತಿ ಕೆತ್ತಿದ್ದಾರೆ. ಕೋಲಾರಮ್ಮ ಸ್ಥಳೀಯ ಗ್ರಾಮ ದೇವತೆ ಶಲ್ತಿರೂಪಿಣಿ. ಅವಳನ್ನು ನೇರವಾಗಿ ನೋಡಬಾರದೆಂದು ಮೊದಲು ಕನ್ನಡಿಯಲ್ಲಿ ಆ ತಾಯಿಯನ್ನು ವೀಕ್ಷಿಸಿ ತದನಂತ ಆ ತಾಯಿಯ ಸ್ವಲ್ಪ ಉಗ್ರವೇ ಎನ್ನಬಹುದಾದ ಮೂರ್ತಿಯನ್ನು ವೀಕ್ಷಿಸಬಹುದು.


ದೇವಳದ ಮುಂಬಾಗದಲ್ಲೇ ಏತ್ತರವಾದ ಕೆತ್ತನೆಯಿಂದ ಕೂಡಿದ ಗೋಡೆಗಳು ಬಾಗಿಲುಗಳು ಇವೆ. ದ್ವಾರ ಮಂಟಪಗಳಿವೆ. ಮುಂದೆ ವಿಶಾಲವಾದ ಪ್ರಾಂಗಣವಿದೆ. ಭವ್ಯವಾದ ಮುಖಮಂಟಪವಿದೆ. ದೊಡ್ಡ ದೊಡ್ಡ ಕಂಬಗಳು ದ್ರಾವಿಡ ಹಾಗೂ ಗಂಗರಸರ ಶೈಲಿಯಲ್ಲಿ ಕೆತ್ತಲ್ಪಟ್ಟಿವೆ.

ಗೋಡೆಯಮೇಲೆ ಯುದ್ಧ ಮಾಡುವ ಚಿತ್ರಣವನ್ನು ಸೊಗಸಾಗಿ ಕೆತ್ತಿದ್ದಾರೆ. ಒಳಗೆ ನಡೆದರೆ ಅಲ್ಲೊಂದು ಚಿಕ್ಕ ಪ್ರಾಕಾರ. ಗುಡಿಯ ಒಳಗೆ ನಡೆದು ಒಳಗೆ ಹೋದರೆ ಸಪ್ತ ಮಾತೃಕೆಯರ ಮೂರ್ತಿಗಳನ್ನು ಬಹಳ ದೊಡ್ಡದಾಗಿ ಕೆತ್ತಿರುವುದನ್ನು ನಾವು ನೋಡಬಹುದು.



ಬಲ ಪಾರ್ಶ್ವದಲ್ಲಿ ಆಂಡಾಳ್ ಬೆಳ್ಳಿ ಒಡವೆಯೊಂದಿಗೆ ಬೆಳ್ಳಿ ಕಮಲದಲ್ಲಿ ನಿಂತು ಬೆಳ್ಳಿ ನಗೆ ಬೀರುತ್ತಿದ್ದರೆ ಎಡ ಪಾರ್ಶ್ವದಲ್ಲಿ ಕೆಂದಾವರೆಯಲ್ಲಿ ನಿಂತು ಕಿರು ನಗೆಯ ಚೆಲ್ವಿನ ಮೋಡಿ ಮಾಡುವಂತೆ ಕಂಗೊಳಿಸುತ್ತಿದ್ದಾಳೆ ಮಹಾಲಕ್ಷ್ಮೀದೇವಿ. ಅಂಗಳದ ಮಂಟಪದ ಮುಂದೆ ಆಳ್ವಾರರುಗಳ ಸಾನಿಧ್ಯವಿದೆ. ಶ್ರೀವೈಷ್ಣವ ಆಚಾರ್ಯರಾದ ಭಗವದ್ರಾಮಾನುಜರ ಭವ್ಯ ಚಿತ್ರವು ಎಲ್ಲರ ಚಿತ್ತಭಿತ್ತಿಗೆ ತಾಗುತ್ತಿದೆ.
ಪ್ರಶಾಂತವಾದ ರಮಣೀಯ ರಂಗನಾಥನ ರ್ಮ್ಯ ಪವಿತ್ರ ಸಾನಿಧ್ಯದಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿ ತಂದಿದ್ದ ಭೋಜನವನ್ನು ಭುಂಜಿಸಿ ಅಲ್ಲಿಂದ ಏಳುವ ಮನಸಿಲ್ಲದಿದ್ದರೂ ಎದ್ದೆವು. ಇನ್ನೊಂದು ಸ್ಥಳದ ಆಕರ್ಷಣೆಯೂ ನಮ್ಮನ್ನು ಆಗ ಕಾಡುತ್ತಿದ್ದಾದ್ದರಿಂದ. ಆಗ ನಮ್ಮ ಕಾರಿನ ಪಯಣದ ದಿಕ್ಕು ಬದಲಿಸಿತು. ನಾವೀಗ ಕನಕಪುರ ಸಮೀಪದ ಕಲ್ಲಹಳ್ಳಿ ಶ್ರೀನಿವಾಸನನ್ನು ದರ್ಶಿಸಲು ಧಾವಿಸಿದೆವು. ಮಧ್ಯಾಹ್ನದ ಸುಮಾರು ನಾಲ್ಕರ ಸಮಯ. ಸಂಜೆಯ ಇಳಿಸೂರ್ಯನ ಹೊಂಗಿರಣಗಳು ನಿಸರ್ಗದ ಮೇಲೆ ಮೋಡಿಮಾಡಿದ್ದವು. ಪ್ರಕೃತಿಯ ಸಿರಿಸೌಂದರ್ಯದ ರಮ್ಯತೆ ನಮ್ಮೆಲ್ಲರ ಮನವನ್ನು ಮುದಗೊಳಿಸಿತ್ತು.

ಇಲ್ಲಿಂದ ನಮ್ಮ ಪಯಣ ಕಲ್ಲಹಳ್ಳಿ ಶ್ರೀನಿವಾಸನ ಬಳಿ ಸಾಗಿತು. ಅದಾಗಲೇ ಇಳಿಗೆಂಪು ಕಳೆದು ಕತ್ತಲೆಯ ಬೆಸುಗೆಯಾಗಿತ್ತು. ೮೦೦ ವರ್ಷಗಳ ಹಳೆಯ ಶ್ರೀನಿವಾಸನ ದೇಗುಲದಲ್ಲಿ ಅವನ ದರ್ಶನ ಪಡೆದೆವು. ಅಭಯಹಸ್ತನಾದ ಪುಟ್ಟ ಸುಂದರಮೂರ್ತಿಯನ್ನು ಕಣ್ಮನ ತುಂಬಿಕೊಂಡೆವು. ಪ್ರಸಾದ ಸ್ವೀಕರಿಸಿ ಮನೆಯತ್ತ ನಡೆದಾಗ ಕಡುಕತ್ತಲಾಗಿತ್ತು. ಚಂದ್ರೋದಯವಾಗತೊಡಗಿತ್ತು.
ಮುಂಜಾನೆಯಿಂದ ಮುಸ್ಸಂಜೆಯವರೆಗಿನ ಪಯಣದಲಿ ನಾವನುಭವಿಸಿ ಉಂಡದ್ದು ಭಗವತ್ಸಾನಿಧ್ಯದ ದಿವ್ಯರಸದೂಟ. ಮರೆಯಲಾಗದ ರಸದಚಿಲುಮೆಯಷ್ಟೆ.
No comments:
Post a Comment